Mon. Dec 1st, 2025

ಸಾಯೋಕೆ ನನ್ನ 1.5 ಕೋಟಿ ರೂ.ಕಾರೇ ಆಗಬೇಕಿತ್ತಾ; ಸುಟ್ಟು ಹಾಕ್ರೋ ಈ ಗಾಡಿನ ಭವಾನಿ ರೇವಣ್ಣ, ಆಕ್ರೋಶ ವಿಡಿಯೋ ವೈರಲ್

ಸಾಯೋಕೆ ನನ್ನ 1.5 ಕೋಟಿ ರೂ.ಕಾರೇ ಆಗಬೇಕಿತ್ತಾ; ಸುಟ್ಟು ಹಾಕ್ರೋ ಈ ಗಾಡಿನ ಭವಾನಿ ರೇವಣ್ಣ, ಆಕ್ರೋಶ ವಿಡಿಯೋ ವೈರಲ್

 

ಡಿ ೦೪: ಬೈಕ್‌ನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಸವಾರನಿಗೆ ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾನುವಾರ (ಡಿಸೆಂಬರ್‌3) ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ, ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗಕ್ಕೆ ತುಸು ಹಾನಿಯಾಗಿದೆ. ಈ ವೇಳೆ ಕೆಂಡಾಮಂಡಲಗೊಂಡ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು, ಬೈಕ್‌ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು ಬಂದು ಬೈಕ್ ಸವಾರನ ಆರೋಗ್ಯ ವಿಚಾರಿಸಿಲ್ಲ. ಬದಲಿಗೆ ಹಿಗ್ಗಾಮುಗ್ಗಾ ಬೇದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಯೋಕೆ 1.5 ಕೋಟಿ ಕಾರೇ ಆಗಬೇಕಿತ್ತಾ, ಸುಟ್ಟು ಹಾಕ್ರೋ ಈ ಗಾಡಿನ ಎಂದು ಹೇಳಿರುವುದು ಕಂಡು ಬಂದಿದೆ.

ಬಳಿಕ ವಾಹನದ ಮುಂಭಾಗ ಡ್ಯಾಮೇಜ್‌ ಆಗಿರುವುದು ನೋಡಿದ ಭವಾನಿ ರೇವಣ್ಣ ಅವರು, ಬೈಕ್‌ ಸವಾರನ ಮೊಬೈಲ್‌ ಕಸಿದುಕೊಂಡು ಬೈಕ್‌ ಕೀ ಕಿತ್ತುಕೊಂಡರು. ” ನಿನಗೆ ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ?’ ಎಂದು ಕೇಳಿದರು. ಅಲ್ಲದೇ, ‘ಬಿಟ್‌ಬಿಡಿ ಅಕ್ಕ’ ಎಂದು ಮಧ್ಯಪ್ರವೇಶಿಸಿದ ಸ್ಥಳೀಯರನ್ನು, ‘ಕೊಡ್ತಿಯಾ ರೂ.50 ಲಕ್ಷ ರಿಪೇರಿ ಮಾಡಿಸೋಕೆ? ಸ್ಥಳದಲ್ಲಿರುವವರು ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ’ ಎಂದು ಸ್ಥಳೀಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅವನು (ಬೈಕ್‌ ಸವಾರ) ಸತ್ತೋಯ್ತಾನೆ ಅಂತ ಅವನ ಬಗ್ಗೆ ಯೋಚೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?’ ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

‘ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ, ಒಂದೂವರೆ ಕೋಟಿ ಗಾಡಿ ಇದು. ಡ್ಯಾಮೇಜ್ ಮಾಡಿದ್ದೀಯಲ್ಲ, ಸಾಯಂಗಿದ್ರೆ ಬಸ್‌ಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರ್ ಡ್ಯಾಮೇಜ್ ಮಾಡೋಕೆ ನೀನ್ಯಾವನು?’ ಎಂದು ಹರಿಹಾಯ್ದಿದ್ದಾರೆ.

ಇದು ಯಾವ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುತ್ತೆ. ಗಾಡಿ ಸೀಜ್‌ ಮಾಡಿಸು. ಈ ಗ್ರಾಮ ಎಸ್‌ಐ ಬರೋಕೆ ಹೇಳಿ ಎಂದು ಹೇಳಿದ್ದು, ಬೈಕ್‌ ಸವಾರ ಮತ್ತು ಹಿಂಬದಿ ಸವಾರನ ಫೋಟೋವನ್ನು ಕ್ಲಿಕ್ಕಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಘಟನೆ ಬಳಿಕ ಸಾಲಿಗ್ರಾಮ ಪೊಲೀಸ್ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಬೈಕ್‌ ಸವಾರ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಘಟನೆಯ 15 ನಿಮಿಷಯಗಳ ಸಂಪೂರ್ಣ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಪಘಾತದ ಬಳಿಕ ವಾಹನ ಸವಾರನ ಆರೋಗ್ಯ ವಿಚಾರಿಸದೇ ಕಾರಿನ ಬಗ್ಗೆ ಯೋಜಿಸಿದ ಭವಾನಿ ರೇವಣ್ಣ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!