Wed. Feb 11th, 2026

ಯಾದಗಿರಿ ಜಿಲ್ಲಾ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ಸಾವು ವೈದ್ಯರ ನಿರ್ಲಕ್ಷ್ಯ ಆರೋಪ – ಪೋಷಕರ ಆಕ್ರೋಶ, ಆಸ್ಪತ್ರೆ ಆಡಳಿತದಿಂದ ಸ್ಪಷ್ಟನೆ

ಯಾದಗಿರಿ ಜಿಲ್ಲಾ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ಸಾವು ವೈದ್ಯರ ನಿರ್ಲಕ್ಷ್ಯ ಆರೋಪ – ಪೋಷಕರ ಆಕ್ರೋಶ, ಆಸ್ಪತ್ರೆ ಆಡಳಿತದಿಂದ ಸ್ಪಷ್ಟನೆ

ಯಾದಗಿರಿ ಡಿ ೦೬ : – ಯಾದಗಿರಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಸಾವಿಗೆ ಕಾರಣ ವೈದ್ಯರ ನಿರ್ಲಕ್ಷ್ಯವೇ ಎಂದು ಪೋಷಕರು ಆರೋಪ ಮಾಡಿರುವ ಘಟನೆ ಜಿಲ್ಲೆಯಲ್ಲಿಆಕ್ರೋಶದ ಅಲೆ ಎಬ್ಬಿಸಿದೆ. ಬಳಿಚಕ್ರ ತಾಂಡಾದ ನಿವಾಸಿ ನೀಲಾಬಾಯಿ ನಿನ್ನೆ ಬೆಳಗ್ಗೆ ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾದರೂ, ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ತೀವ್ರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೆಡ್ ಕೊಡದೆ ನೆಲದ ಮೇಲೆಯೇ ಮಲಗಿಸಿದ ಘಟನೆ:-
ಕುಟುಂಬದವರ ಹೇಳಿಕೆಯ ಪ್ರಕಾರ, ನೀಲಾಬಾಯಿ ನಿನ್ನೆ ಇಡೀ ದಿನ ಆಸ್ಪತ್ರೆಯ ಬೀದಿಯಲ್ಲಿ ಹಾಗೂ ಓಪಿಡಿ ಸಮೀಪದ ನೆಲದ ಮೇಲೆಯೇ ಮಲಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. “ಹೆರಿಗೆ ನೋವಿನಿಂದ ಕಿರುಚುತ್ತಿದ್ದರೂ ಸಿಬ್ಬಂದಿ ಕೇರ್ ಮಾಡಲಿಲ್ಲ. ನಾರ್ಮಲ್ ಆಗುತ್ತೆ ಅಂತ ಹೇಳಿ ರಾತ್ರಿಯಿಡೀ ನೋವಿನಲ್ಲಿ ಬಿಟ್ಟರು. ಬೆಳಗ್ಗೆ 5ಕ್ಕೆ ಅಚಾನಕ್ ಸಿಜೇರಿಯನ್ ಮಾಡಿ, ಮಗು ಸತ್ತು ಹೋದುದು,” ಎಂದು ಪೋಷಕರು ಕಣ್ಣೀರು ಹಾಕಿದರು.

ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದ ಆರೋಪ:-
“ಸಮಯಕ್ಕೆ ಸಿಜೇರಿಯನ್ ಮಾಡಿದ್ರೆ ಮಗು ಉಳಿಯುತ್ತಿತ್ತು. ನಮ್ಮನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಿರ್ಲಕ್ಷ್ಯದಿಂದ ನಮ್ಮ ಮಗುವನ್ನು ಕಳೆದುಕೊಂಡಿದ್ದೇವೆ,” ಎಂದು ಕುಟುಂಬದವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ಇನ್ನೊಂದೆಡೆ ಇದೇ ಘಟನೆಯನ್ನು ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ‘ಡಾ. ರಿಜ್ವಾನ್ ಆಫ್ರೀನ್’ ಮಾಧ್ಯಮದ ಮುಂದೆ ಸಂಪೂರ್ಣ ಘಟನೆಯ ವಿವರ ನೀಡುವ ಮೂಲಕ ನಿರ್ಲಕ್ಷ್ಯ ಆರೋಪವನ್ನು ತಳ್ಳಿಹಾಕಿದರು.

ಆಸ್ಪತ್ರೆಯ ವೈದ್ಯಾಧಿಕಾರಿಗಳ ಸ್ಪಷ್ಟನೆ:-
ಡಾ. ಆಫ್ರೀನ್ ಅವರ ವಿವರ ಪ್ರಕಾರ, ನೀಲಮ್ಮ (ನೀಲಾಬಾಯಿ) ಅವರನ್ನು ಡಿಸೆಂಬರ್ 6ರಂದು ಮಧ್ಯಾಹ್ನ 12:30ಕ್ಕೆ ದಾಖಲಿಸಲಾಗಿದೆ. ಇದು ಅವರ ಮೂರನೇ ಗರ್ಭಧಾರಣೆ. ನಿಗದಿತ ಹೆರಿಗೆಯ ದಿನಾಂಕ 26/11 ಆಗೇ ಹಾದುಹೋಗಿದ್ದು, ಇದು “ಪೋಸ್ಟ್-ಡೆಟೆಡ್ ಪ್ರೆಗ್ನೆನ್ಸಿ” ಆಗಿತ್ತು. ದಾಖಲಾಗುವ ವೇಳೆಗೆ ಹೆರಿಗೆ ನೋವು ಇರಲಿಲ್ಲ ಮತ್ತು ರಕ್ತದೊತ್ತಡ 160/90 ಆಗಿತ್ತು. ಎಲ್ಲಾ ಪರೀಕ್ಷೆಗಳ ನಂತರ ಮುಂದಿನ ದಿನ ಸಿಜೇರಿಯನ್ ಅಥವಾ ಸಾಮಾನ್ಯ ಹೆರಿಗೆ ಬಗ್ಗೆ ನಿರ್ಧಾರ ಮಾಡಲು ತಯಾರಿ ನಡೆಯುತ್ತಿತ್ತು.

ಆದರೆ ರಾತ್ರಿ ‘3 ಗಂಟೆಗೆ ಗಂಭೀರ ಸ್ಥಿತಿ’ ಉಂಟಾಯಿತು. ಪ್ಲಸೆಂಟಾ ತನ್ನ ಸ್ಥಾನದಿಂದ ಜಾರುವ ‘ಅಬ್ರಪ್ಷನ್’ ಘಟನೆ ಸಂಭವಿಸಿ ತೀವ್ರ ರಕ್ತಸ್ರಾವ ಪ್ರಾರಂಭವಾಯಿತು. ತಕ್ಷಣವೇ 4 ಗಂಟೆಗೆ ಶಸ್ತ್ರಚಿಕಿತ್ಸೆಗೆ ತೆಗೆದುಕೊಂಡರೂ, ಶಿಶುವಿನ ಹೃದಯಬಡಿತ ಶಸ್ತ್ರಚಿಕಿತ್ಸೆಗೆ ಮುನ್ನವೇ ನಿಂತಿತ್ತು. “ಎನ್‌ಎಸ್‌ಟಿ ಮತ್ತು ಎಫ್‌ಎಚ್‌ಎಸ್‌ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ರಕ್ತಸ್ರಾವದ ನಂತರ 20–30 ನಿಮಿಷಗಳಲ್ಲಿ ಹೃದಯಬಡಿತ ನಿಂತಿತು,” ಎಂದು ವೈದ್ಯರು ವಿವರಿಸಿದರು.

ತಾಯಿ ಪ್ರಸ್ತುತ ಸ್ಥಿರವಾಗಿದ್ದರೂ ಇನ್ನೂ 48 ಗಂಟೆಗಳ ಅಪಾಯವಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ವೈದ್ಯರ ಪಾತ್ರಕ್ಕೂ ಅನುಮಾನ:-
ಗರ್ಭಿಣಿ ಮಹಿಳೆ ತಡವಾಗಿ ಬಂದಿರುವುದೇ ಪ್ರಮುಖ ಕಾರಣವಾಗಿರಬಹುದೆಂಬ ಶಂಕೆಯನ್ನು ಡಾ. ಆಫ್ರೀನ್ ವ್ಯಕ್ತಪಡಿಸಿದರು. “ಖಾಸಗಿ ವೈದ್ಯರು ಹೆರಿಗೆ ದಿನಾಂಕವನ್ನು 13ಕ್ಕೆ ನಿಗದಿ ಮಾಡಿರುವುದು ಮತ್ತು ಕೆಲವು ಗುಳಿಗೆಗಳನ್ನು ನೀಡಿರುವ ದಾಖಲೆಗಳು ಸಿಕ್ಕಿವೆ. ಅವರು ಯಾವ ಪದವಿ ಹೊಂದಿದ್ದಾರೆ ಎಂಬುದೇ ಸ್ಪಷ್ಟವಿಲ್ಲ,” ಎಂದು ಹೇಳಿದರು.

ತನಿಖೆ – ಹೊಣೆಗಾರರ ವಿರುದ್ಧ ಕ್ರಮ:-
ಘಟನೆ ಕುರಿತು ಪೂರ್ಣ ಪ್ರಮಾಣದ ‘ಆಡಿಟ್ ತನಿಖೆ’ ನಡೆಯಲಿದ್ದು, ತಪ್ಪು ಕಂಡುಬಂದರೆ ಯಾವುದೇ ವೈದ್ಯ ಅಥವಾ ಸಿಬ್ಬಂದಿಯನ್ನು ಬಿಟ್ಟುಹೋಗದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.

ಜಿಲ್ಲೆಯಲ್ಲಿ ಉದ್ಭವಿಸಿದ ಪ್ರಶ್ನೆಗಳು:-
ಈ ಘಟನೆ ಸಾರ್ವಜನಿಕರಲ್ಲಿ ವೈದ್ಯಕೀಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಪೋಷಕರು ವೈದ್ಯರ ವಿರುದ್ಧ ಗಟ್ಟಿಯಾದ ಕ್ರಮಕ್ಕೆ ಆಗ್ರಹಿಸುತ್ತಿದ್ದು,
ಆಸ್ಪತ್ರೆ ಆಡಳಿತವು ತನಿಖೆಯ ಮೂಲಕ ನಿಜಾವಸ್ಥೆ ಬಹಿರಂಗಪಡಿಸಲಾಗುತ್ತದೆ ಎಂದು ಭರವಸೆ ನೀಡಿದೆ.
ನೀಲಾಬಾಯಿ ತಮ್ಮ ಮಗುವನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದು, ಜಿಲ್ಲೆ ಈ ಘಟನೆಯ ನಿಜಾಂಶ ಹೊರಬರುವ ನಿರೀಕ್ಷೆಯಲ್ಲಿ ಕುಳಿತಿದೆ.

Related Post

Leave a Reply

Your email address will not be published. Required fields are marked *

error: Content is protected !!