ಯಾದಗಿರಿ ನ ೦೫: ಭಾರತ ಮಾಲಾ ಯೋಜನೆಯಡಿ ಸೂರತ್–ಚೆನ್ನೈ ಎನ್ಎಚ್–150ಸಿ ಅಡಿಯಲ್ಲಿ ನಡೆಯುತ್ತಿರುವ ಚೆನ್ನೈ ಆರ್ಥಿಕ ಕಾರಿಡಾರ್ ರಸ್ತೆ ನಿರ್ಮಾಣ ಕಾರ್ಯದಿಂದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳಂದ ತಾಲೂಕಿನ ನಿಂಬಾಳ ಗ್ರಾಮದಿಂದ ರಾಯಚೂರು ಜಿಲ್ಲೆಯ ಸಿಂಗೋಡಿ ಗ್ರಾಮವರೆಗೆ, ಯಾದಗಿರಿ ಜಿಲ್ಲೆಯಲ್ಲಿ ೯೭ ಕಿ.ಮೀ.ರಿಂದ ೧೬೨ ಕಿ.ಮೀ. ವರೆಗೆ ಒಟ್ಟು ೬೫ ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದೆ, ಆದರೆ ರೈತರಿಗೆ ಪರಿಹಾರ ನೀಡದೆ ಭೂಮಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಉಳ್ಳೆಸೂಗೂರು ಸೇರಿದಂತೆ ಅನೇಕ ರೈತರಿಗೆ ಭೂಪರಿಹಾರ ನೀಡದೆ ಅವರ ಜಮೀನು ಬಳಸಲಾಗಿದೆ.** ತಕ್ಷಣ ಪರಿಹಾರ ಧನ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ರಸ್ತೆಯ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡದೇ ಇರುವುದರಿಂದ ರೈತರು ತಮ್ಮ ಹೊಲಗಳಿಗೆ ಹೋಗುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ನಿರ್ಮಾಣದ ವೇಳೆ ಮರಮ್ ತೆಗೆಯುವ ಕಾರ್ಯದಿಂದ ದೊಡ್ಡ ಗುಂಡಿಗಳು ಉಂಟಾಗಿದ್ದು, ಅವು ಪಶುಗಳು ಮತ್ತು ಮಕ್ಕಳ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
ಗ್ರಾಮೀಣ ರಸ್ತೆಗಳು ಹಾಳಾಗಿರುವುದರಿಂದ ಕಾರಿಡಾರ್ ಸಂಸ್ಥೆಯು ರಿಪೇರಿ ಕಾರ್ಯ ಮಾಡಬೇಕು, ರೈತರ ಮಕ್ಕಳಿಗೆ ಯೋಜನಾ ನಿರಾಶ್ರಿತರ ಪ್ರಮಾಣಪತ್ರ ನೀಡಬೇಕು ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ನೇಮಕಾತಿ ಪರಿಗಣಿಸಬೇಕು ಎಂದು ಬೇಡಿಕೆ ಇಟ್ಟರು.
ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ರೈತರು ಮುಂದಿನ ಕಾಮಗಾರಿಯನ್ನು ತಡೆಹಿಡಿಯುವ ಎಚ್ಚರಿಕೆ ನೀಡಲಾಗಿದೆ ಎಂದು ಡಾ. ಮೇಟಿ ತಿಳಿಸಿದ್ದಾರೆ.

