Wed. Feb 11th, 2026

ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ

ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ
  • RTI ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ – ಆಯುಕ್ತ ಬದ್ರುದ್ದೀನ್ ಕೆ.
  • ಯಾದಗಿರಿ ಜಿಲ್ಲೆಯಲ್ಲಿ 723 ಆಪೀಲುಗಳು ಬಾಕಿ, ಪಂಚಾಯತ್‌ರಾಜ್ ಇಲಾಖೆಯಲ್ಲಿ 280 ಪ್ರಕ್ರಿಯೆಯಲ್ಲಿವೆ
  • RTI ಕಾಯ್ದೆ ಸರಳವಾದರೂ ಗಂಭೀರ – ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ ಹಾಗೂ ಶಿಸ್ತು ಕ್ರಮ ಸಾಧ್ಯ
  • ಜನರಲ್ಲಿ ಮಾಹಿತಿ ಹಕ್ಕು ಕುರಿತು ಅರಿವು ಹೆಚ್ಚುತ್ತಿದೆ, ಪಾರದರ್ಶಕ ಆಡಳಿತಕ್ಕೆ ನಾಗರಿಕ–ಅಧಿಕಾರಿ ಸಹಕಾರ ಅಗತ್ಯ

ಯಾದಗಿರಿ ಅ ೧೦:-  ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ನೇರ ಸಂವಾದ ನಡೆಯುವುದು ಅತ್ಯಂತ ಅಗತ್ಯ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಕಾಯ್ದೆಯ ಪರಿಣಾಮಕಾರಿ ಜಾರಿಗೆ ಸಂಬಂಧಿಸಿದಂತೆ ಚರ್ಚಿಸಿದರು.

ರಾಜ್ಯ ಮಟ್ಟದಲ್ಲಿ ಕಳೆದ ಎಂಟು ತಿಂಗಳಲ್ಲಿ 55,000ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದು, ಪ್ರಸ್ತುತ ಸುಮಾರು 40,000 ಆಪೀಲುಗಳು ಬಾಕಿಯಿವೆ. ಯಾದಗಿರಿ ಜಿಲ್ಲೆಯಲ್ಲಿ ಮಾತ್ರ 723 ಆಪೀಲುಗಳು ಬಾಕಿಯಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಲ್ಲಿ 280 ಅರ್ಜಿಗಳು ಪ್ರಕ್ರಿಯೆಯಲ್ಲಿವೆ ಎಂದು ಅವರು ತಿಳಿಸಿದರು. “ಈ ಅಂಕಿಅಂಶಗಳು ಜನರಲ್ಲಿ RTI ಕುರಿತು ಅರಿವು ಹೆಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿ,” ಎಂದು ಆಯುಕ್ತರು ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, “ಈ ಕಾಯ್ದೆ ಸರಳವಾದಂತಿದೆ ಎಂದುಕೊಳ್ಳಬಾರದು. ಇದು ಅತ್ಯಂತ ಗಂಭೀರವಾದ ಕಾನೂನು. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾಹಿತಿ ನೀಡದಿದ್ದರೆ, 25,000 ರೂ.ವರೆಗೆ ದಂಡ ವಿಧಿಸುವ ಅಧಿಕಾರ ಆಯೋಗಕ್ಕೆ ಇದೆ. ಜೊತೆಗೆ ಅರ್ಜಿದಾರರಿಗೆ ತೊಂದರೆ ಉಂಟಾದರೆ, ಒಂದು ಲಕ್ಷ ರೂ.ವರೆಗೆ ಪರಿಹಾರ ನೀಡುವ ಅವಕಾಶವೂ ಇದೆ,” ಎಂದು ಎಚ್ಚರಿಸಿದರು.

ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಸಂವಾದದ ಕೊರತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು. “ನ್ಯಾಯಯುತ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಮಾಹಿತಿ ಕೇಳಿದರೆ ಕಾಯ್ದೆ ಬಲವಾಗುತ್ತದೆ. ಆದರೆ ದುರುಪಯೋಗ ಮಾಡಿದರೆ ಕಾನೂನಿನ ಗೌರವ ಕುಗ್ಗುತ್ತದೆ,” ಎಂದು ಹೇಳಿದರು.

ಸಭೆಯಲ್ಲಿ ಅಧಿಕಾರಿಗಳಿಗೆ, ಕಮಿಷನ್‌ನಿಂದ ಬರುವ ನೋಟೀಸುಗಳಿಗೆ ಸಮಯಕ್ಕೆ ತಕ್ಕಂತೆ ಸ್ಪಂದಿಸಬೇಕು ಮತ್ತು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಲಾಯಿತು. RTI ಕಾಯ್ದೆ ಇತ್ತೀಚಿಗೆ 20 ವರ್ಷ ಪೂರೈಸಿದ್ದು, ಅದರ ಪ್ರಭಾವ ಗ್ರಾಮೀಣ ಮಟ್ಟದಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆಯುಕ್ತರು ಹೇಳಿದರು.

ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಡಾ. ಹರೀಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಾರದರ್ಶಕ ಆಡಳಿತಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳು ಸಮಾನ ಜವಾಬ್ದಾರಿ ಹೊತ್ತಾಗ ಮಾತ್ರ ನಿಜವಾದ ಜನಸೇವೆ ಸಾಧ್ಯ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Related Post

Leave a Reply

Your email address will not be published. Required fields are marked *

error: Content is protected !!