ರಾಯಚೂರ ಅ ೦೮: ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ರವರ ಮೇಲೆ ನಡೆದ ಶೂ ಎಸೆಯುವ ಘಟನೆಯು ದೇಶದ ನ್ಯಾಯಾಂಗ ವ್ಯವಸ್ಥೆಗೆ ಅವಮಾನವಾಗಿದೆ ಎಂದು ಭೀಮಸೇನೆ ಕರ್ನಾಟಕ ಸಂಘಟನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ಬೆಳಿಗ್ಗೆ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ವಕೀಲ ಕಿಶೋರ್ ರಾಕೇಶ್ ನ್ಯಾಯಮೂರ್ತಿಗಳತ್ತ ಶೂ ಎಸೆಯಲು ಮುಂದಾದ ಘಟನೆ ಸಂಭವಿಸಿತ್ತು.
ಈ ಘಟನೆಯನ್ನು ಖಂಡಿಸಿರುವ ಭೀಮಸೇನೆ ಕರ್ನಾಟಕದ ನಾಯಕ ಪ್ರಶಾಂತ್ ಪಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ನ್ಯಾಯಾಂಗದ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. “ನ್ಯಾಯದ ದೇವಾಲಯದಲ್ಲಿ ಇಂತಹ ಅಮಾನವೀಯ ನಡತೆ ಅಸಹ್ಯ. ಆ ವಕೀಲನ ವಕಾಲತ್ತು ಪರವಾನಗಿ ತಕ್ಷಣವೇ ರದ್ದುಪಡಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವಶ್ಯಕತೆ ಇದ್ದರೆ ಇಂತಹ ಕೃತ್ಯ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು,” ಎಂದು ಆಗ್ರಹ ವ್ಯಕ್ತಪಡಿಸಿದರು.
ನ್ಯಾಯಾಂಗದ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಕೃತ್ಯವು ಕಾನೂನು ಪ್ರಭುತ್ವವನ್ನು ಪ್ರಶ್ನಿಸುವಂತದ್ದು ಎಂದು ಅವರು ತಿಳಿಸಿದರು. ಭೀಮಸೇನೆ ಕರ್ನಾಟಕ ಸಂಘಟನೆಯ ಸದಸ್ಯರು ಈ ಘಟನೆಯನ್ನು ಖಂಡಿಸಿ, ನ್ಯಾಯಮೂರ್ತಿಗಳ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಮನವಿ ಮಾಡಿದರು.
ಸಿಜೆಐ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲನಿಗೆ ಗಲ್ಲು ಶಿಕ್ಷೆ ವಿಧಿಸಬೇಕು – ಭೀಮಸೇನೆ ಕರ್ನಾಟಕ ಆಗ್ರಹ

