ಯಾದಗಿರಿ : ಅ.೫ – ರಾಜ್ಯದ ಕಾರ್ಮಿಕರ ಹಕ್ಕು, ಹಿತಾಸಕ್ತಿ ಹಾಗೂ ಭದ್ರತೆಗಾಗಿ ಕೆಲಸ ಮಾಡುವ ಉದ್ದೇಶದಿಂದ “ನೆರವು ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಸಂಘಟನೆಯ” ಯಾದಗಿರಿ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮವು ಇಂದು ನಗರದ ಹೃದಯಭಾಗದಲ್ಲಿರುವ ಜೈ ಭವಾನಿ ಕಂಪ್ಲೇಕ್ಸ್ ,ಚಾಲುಕ್ಯ ಹೋಟಲ್ ಹತ್ತಿರ ಚಿತ್ತಪ್ಪುರ ರೋಡ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರಾದ ಅಶ್ವಥ್ ಟಿ. ಮರಿಗೌಡರು ಚಾಲನೆ ನೀಡಿ ಮಾತನಾಡಿ, “ಅಸಂಘಟಿತ ಕಾರ್ಮಿಕರು ನಮ್ಮ ರಾಜ್ಯದ ಅಭಿವೃದ್ಧಿಯ ನಿಜವಾದ ಶಕ್ತಿ. ಅವರ ಹಕ್ಕುಗಳನ್ನು ಕಾಯ್ದುಕೊಳ್ಳಲು, ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಈ ಸಂಘಟನೆಯು ಪ್ರಮುಖ ಪಾತ್ರವಹಿಸಲಿದೆ. ಎಲ್ಲರೂ ಶಿಸ್ತುಬದ್ಧವಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸಂಘಟನೆ ಬಲಿಷ್ಠವಾಗಲಿದೆ” ಎಂದು ಹೇಳಿದರು.
ಅವರು ಮುಂದುವರೆದು, “ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಮಿಕರ ಕಲ್ಯಾಣ ನಿಧಿಗಳನ್ನು ಅಸಂಘಟಿತ ವರ್ಗದ ಕಾರ್ಮಿಕರಿಗೆ ತಲುಪಿಸಲು ನಾವು ಸೇತುವೆಯಾಗಿ ಕೆಲಸ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಈ ಸಂದರ್ಭ ಹಿರೇಮಠದ ಶ್ರೀ ಸೂಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಸಂಘಟನೆ ಬಲವಾಗಿದಾಗ ಮಾತ್ರ ಕಾರ್ಮಿಕರ ಧ್ವನಿಗೆ ಸರ್ಕಾರ ಸ್ಪಂದಿಸುತ್ತದೆ. ಶಾಂತಿ, ಶಿಸ್ತು, ಪ್ರಾಮಾಣಿಕತೆ ಮತ್ತು ಸೇವಾಭಾವನೆ ಎನ್ನುವ ನಾಲ್ಕು ಸ್ತಂಭಗಳ ಮೇಲೆ ಈ ಸಂಘಟನೆ ನಿಲ್ಲಬೇಕು” ಎಂದು ಉಪದೇಶಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಯೂ ನೆರವೇರಿತು. ಹೊಸದಾಗಿ ಆಯ್ಕೆಯಾದ ಅಧಿಕಾರಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಘಟಕರು, ತಾಲ್ಲೂಕು ಪ್ರತಿನಿಧಿಗಳು, ಕಾರ್ಮಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವು ಬದ್ಧತೆ, ಬಲ ಮತ್ತು ಭರವಸೆಯ ಸೂರ್ಯೋದಯದಂತಿತ್ತು.

