ಯಾದಗಿರಿ: ಯಾದಗಿರಿ ತಾಲೂಕಿನ ಹತ್ತಿಕುಣಿ ಸಮೀಪದ ದುಗುನೂರು ಹಟ್ಟಿಯಲ್ಲಿ ಇಂದು (ಗುರುವಾರ) ಬೆಳಿಗ್ಗೆ ನಡೆದ ಹೃದಯವಿದ್ರಾವಕ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕುಟುಂಬ ಕಲಹದ ಹಿನ್ನೆಲೆ ತಂದೆಯೇ ಇಬ್ಬರು ಚಿನ್ನದ ಮುತ್ತುಗಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಸಾನ್ವಿ (3) ಮತ್ತು ಭಾರ್ಗವ (5) ಎಂದು ಗುರುತಿಸಲಾಗಿದೆ. ಇವರ ತಂದೆ ಶರಣಪ್ಪ ಹನುಮಂತ ಕೊಲೆಗೈದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶರಣಪ್ಪ ದಂಪತಿ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಬುಧವಾರ ರಾತ್ರಿ ಸಹ ಪತ್ನಿ ಜೊತೆ ವಾಗ್ವಾದ ಉಂಟಾಗಿತ್ತು. ಕೋಪಗೊಂಡಿದ್ದ ಶರಣಪ್ಪ, ಗುರುವಾರ ಬೆಳಗ್ಗೆ ಮಲಗಿದ್ದ ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ಅಲೆ ಮಾಡಿ ಕೊಲೆಗೈದಿದ್ದಾನೆ. ಗಂಭೀರ ಗಾಯಗೊಂಡಿದ್ದ ಇಬ್ಬರು ಮಕ್ಕಳು ಮನೆಯಲ್ಲಿ ತೀವ್ರ ರಕ್ತಸ್ರಾವದಿಂದ ಸಾವಿಗೀಡಾದರು.
ಘಟನೆ ತಿಳಿದ ತಕ್ಷಣ ಯಾದಗಿರಿ ಗ್ರಾಮೀಣ ಠಾಣೆ ಪಿಎಸ್ಐ ಹನುಮಂತ ಬಂಕ್ಲಿಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶರಣಪ್ಪ ಪತ್ನಿಯ ಮೇಲೆ ಆಗಾಗ ಶಂಕೆ ವ್ಯಕ್ತಪಡಿಸುತ್ತಿದ್ದನು ಹಾಗೂ ಮೂರ್ ಮಕ್ಕಳನ್ನು ತನ್ನವರೆಲ್ಲ ಎಂದು ವಾದಿಸುತ್ತಿ ಅನುಮಾನದಿಂದಾಗಿ ನಿರಂತರ ಜಗಳ ಮಾಡುತ್ತಿದ್ದನೆಂದು ಮೂಲಗಳು ತಿಳಿಸಿವೆ. ಈ ಕಾರಣಕ್ಕೆ ಪತ್ನಿ ಒಂದೂವರೆ ವರ್ಷಗಳಿಂದ ತವರಿನಲ್ಲಿ ವಾಸಿಸುತ್ತಿದ್ದರು. ಕೇವಲ 15 ದಿನಗಳ ಹಿಂದೆ ಪತ್ನಿ ಮರುಬಂದು ಗಂಡನ ಮನೆಯಲ್ಲಿ ನೆಲೆಸಿದ್ದರು.
ಗುರುವಾರ ಬೆಳಗ್ಗೆ ಮತ್ತೊಮ್ಮೆ ಗಲಾಟೆ ಉಂಟಾದ ಹಿನ್ನೆಲೆಯಲ್ಲಿ ಕೋಪಗೊಂಡ ಶರಣಪ್ಪ ಇಬ್ಬರು ಮಕ್ಕಳನ್ನು ನಿರ್ದಯವಾಗಿ ಕೊಲೆಗೈದು ಬಳಿಕ ಸಮೀಪದ ಬೆಟ್ಟದ ಕಡೆಗೆ ಪರಾರಿಯಾದನೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಶರಣಪ್ಪನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲೆ ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.

