ಸುರಪುರ ಅ6: ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಸುರಪುರ ನಗರದ ಡೊಣ್ಣಿಗೇರ ಬಡಾವಣೆಯಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.
ಕೊಲೆಯಾದವರು ಮರೆಮ್ಮ (35) ಎಂಬುವರು. ಅವರ ಪತಿ ಸಂಗಪ್ಪ (40) ಕೊಲೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಸಂಗಪ್ಪ ತಾನೇ ಸುರಪುರ ಪೊಲೀಸ್ ಠಾಣೆಗೆ ಹಾಜರಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಡ-ಹೆಂಡತಿಯ ನಡುವೆ ಭಾನುವಾರ ರಾತ್ರಿ ದೈಹಿಕ ಸಂಪರ್ಕ ವಿಚಾರವಾಗಿ ಜಗಳ ಉಂಟಾಗಿದೆ. ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿರಲಿಲ್ಲವೆಂಬ ಕಾರಣಕ್ಕೆ ಸಂಗಪ್ಪ ಕೋಪಗೊಂಡು ಕೊಡಲಿಯಿಂದ ಪತ್ನಿಯ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಹತ್ಯೆಗೈದಿದ್ದಾನೆ.
ಸಂಗಪ್ಪ ಕಳೆದ ಎರಡು ದಿನಗಳ ಹಿಂದೆ ತನ್ನ ಊರಾದ ಕಕ್ಕೇರದಿಂದ ಸುರಪುರಕ್ಕೆ ಬಂದಿದ್ದ. ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂಬ ಕಾರಣಕ್ಕೆ ಮರೆಮ್ಮ ಒಂದು ವರ್ಷದಿಂದ ತವರು ಮನೆ ಡೋಣಿಗೇರಾದಲ್ಲೇ ವಾಸಿಸುತ್ತಿದ್ದರು. ಭಾನುವಾರ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಸಂಗಪ್ಪ, ಅವಳ ನಿರಾಕರಣೆಯಿಂದ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಸುರಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿ ಸಂಗಪ್ಪನನ್ನು ಪೊಲೀಸರು ಬಂಧಿಸಿದ್ದು, ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

