Tue. Nov 25th, 2025

ಬಂದಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ: ಮರದ ಕೆಳಗೆ ಪಾಠ ಕೇಳುವ ವಿದ್ಯಾರ್ಥಿಗಳ ವೇದನೆ

ಬಂದಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ: ಮರದ ಕೆಳಗೆ ಪಾಠ ಕೇಳುವ ವಿದ್ಯಾರ್ಥಿಗಳ ವೇದನೆ

ಯಾದಗಿರಿ, ಜುಲೈ 16: ಯಾದಗಿರಿ ತಾಲ್ಲೂಕಿನ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಭಾಗವನ್ನೊಳಗೊಂಡ ಬಂದಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೀವ್ರ ಕೊಠಡಿಗಳ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ಗಂಭೀರ ಅಡೆತಡೆ ಆಗುತ್ತಿದೆ. ಶಾಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಶಾಲೆಗೆ ಸಾಕಷ್ಟು ತರಗತಿ ಕೊಠಡಿಗಳು ಇಲ್ಲದ ಕಾರಣದಿಂದಾಗಿ ಮಕ್ಕಳು ಮರದ ನೆರಳಿನಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

1 ರಿಂದ 3 ನೇ ತರಗತಿಯ ಮಕ್ಕಳಿಗೆ ಒಂದೇ ಸ್ಥಳದಲ್ಲಿ ಸೇರಿಸಿ ಪಾಠ ಮಾಡಲಾಗುತ್ತಿದೆ. ಕೆಲವೊಮ್ಮೆ ಸ್ಟಾಪ್ ರೂಂ ಗಳಲ್ಲಿ ಅಥವಾ ಶಾಲೆಯ ಬಾಗಿಲಿಗೆ ಬದಿಯಾದ ಜಾಗದಲ್ಲೇ ಪಾಠ ನಡೆಯುತ್ತಿರುವುದು ಕಂಡುಬರುತ್ತಿದೆ. ಈ ರೀತಿಯ ಪರಿಸ್ಥಿತಿ ಮಕ್ಕಳು ಸರಿಯಾಗಿ ಕಲಿಯಲು ತೊಂದರೆಯಾಗಿ ಪರಿಣಮಿಸುತ್ತಿದ್ದು, ಶಿಕ್ಷಕರಿಗೆ ಸಹ ಬೋಧನೆ ಮಾಡುವುದು ಕಠಿಣವಾಗುತ್ತಿದೆ.

ಸ್ಥಳೀಯ ಸಾರ್ವಜನಿಕರು, ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಗಮನಸೆಳೆದರೂ ಕೂಡ ಯಾವುದೇ ಸ್ಪಂದನೆ ದೊರೆಯಿಲ್ಲ. ಈ ಶಾಲೆಗೆ ಹೊಸ ಕೊಠಡಿಗಳು ಬೇಕೆಂದು ಪದೇಪದೇ ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ.

ಈ ಸಮಸ್ಯೆಯನ್ನು ನಿವಾರಿಸಲು ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಶಾಸಕರು ತಕ್ಷಣ ಮುಂದಾಗಬೇಕಾಗಿದೆ. ಮಕ್ಕಳು ಮರದ ಕೆಳಗೆ ಅಥವಾ ತಾತ್ಕಾಲಿಕ ಕೊಠಡಿಗಳಲ್ಲಿ ಕುಳಿತು ಪಾಠ ಕೇಳುವುದು ಅವರ ಬೌದ್ಧಿಕ ಅಭಿವೃದ್ಧಿಗೆ ತೊಂದರೆ ಉಂಟುಮಾಡಬಹುದು. ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹವಾನಿಯಂತ್ರಿತ ಕೋಣೆಗಳು ಮತ್ತು ಇತರ ಮೂಲಭೂತ ಸೌಲಭ್ಯಗಳು ಕೂಡ ಅವಶ್ಯಕವಾಗಿವೆ.

ಇದೇ ರೀತಿಯಲ್ಲಿ ಮುಂದುವರಿದರೆ ಮಕ್ಕಳ ಶಿಕ್ಷಣ ಕತ್ತಲಲ್ಲಿ ಮೂಡುವ ಭೀತಿಯಿದೆ. ಶಾಲೆಗೆ ಆದಷ್ಟು ಬೇಗ ಹೊಸ ಕೊಠಡಿಗಳನ್ನು ನಿರ್ಮಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸುವ ಕಾರ್ಯಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಧ್ವರ ಕೈ ಹಾಕಬೇಕಿದೆ. ಗ್ರಾಮಸ್ಥರು ಈ ಬಗ್ಗೆ ನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಹತ್ತಿರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!