Mon. Dec 1st, 2025

ವಿಷಕಾರಿ ಚೇಳುಗಳೊಂದಿಗೆ ಭಕ್ತರ ಆಟ: ಕೊಂಡಮ್ಮ ಜಾತ್ರೆಯ ಅಪರೂಪದ ನೋಟ

ವಿಷಕಾರಿ ಚೇಳುಗಳೊಂದಿಗೆ ಭಕ್ತರ ಆಟ: ಕೊಂಡಮ್ಮ ಜಾತ್ರೆಯ ಅಪರೂಪದ ನೋಟ

ಗುರುಮಠಕಲ್, ಜು.29 –ಸಾಮಾನ್ಯವಾಗಿ ನಾಗರ ಪಂಚಮಿಯಂದು ನಾಗದೇವತೆಗೆ ಹಾಲು ಎರೆದು ಪೂಜೆ ಸಲ್ಲಿಸುವುದು ಚಿರಪರಿಚಿತ ದೃಶ್ಯ. ಆದರೆ, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಈ ಹಬ್ಬ ಸಂಪೂರ್ಣ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ನಾಗರ ಪಂಚಮಿಯಂದು ನಾಗದೇವರ ಬದಲಿಗೆ ನಿಜವಾದ ವಿಷಕಾರಿ ಚೇಳುಗಳಿಗೆ ಪೂಜೆ ಸಲ್ಲಿಸುತ್ತಾರೆ!

ಗ್ರಾಮದ ಬೆಟ್ಟದ ಮೇಲಿರುವ ಶಕ್ತಿಸ್ಥಳ ಕೊಂಡಮ್ಮ ದೇವಿ ಜಾತ್ರೆ ಪ್ರಯುಕ್ತ, ಈ ದಿನ ಮಾತ್ರ ಕಂದಕೂರ ಗ್ರಾಮ ಚೇಳುಗಳ ಸನ್ನಿಧಾನವಾಗುತ್ತದೆ. ಭಕ್ತರು ಪವಾಡದಂತೆ ಅಳೆಯುವ ಈ ಜಾತ್ರೆಯಲ್ಲಿ, ಮಕ್ಕಳು, ಯುವಕರು, ಮಹಿಳೆಯರು ಸಹ ಚೇಳುಗಳನ್ನು ಕೈಮೇಲೆ, ಮೈಮೇಲೆ ಇಟ್ಟುಕೊಂಡು ನಿರ್ಭಯವಾಗಿ ಆಟವಾಡುತ್ತಾರೆ. ಕೆಲವರು ನಿಜವಾದ ಚೇಳುಗಳನ್ನು ನಾಲಿಗೆಯ ಮೇಲೆ ಇಡೋ ಸಾಹಸವನ್ನೂ ತೋರಿಸುತ್ತಾರೆ!

ವಿಷದ ಜಂತುಗಳಿಲ್ಲದ ಹಾನಿ
ಇಲ್ಲಿ ವಿಶೇಷವೆಂದರೆ, ಈ ಶಕ್ತಿ ಕ್ಷೇತ್ರದಲ್ಲಿ ಇವರೆಗೆ ಯಾವುದೇ ಭಕ್ತನಿಗೆ ಚೇಳು ಕಚ್ಚಿದ ಘಟನೆ ನಡೆದಿದೆ ಎಂಬ ದಾಖಲೆಗಳಿಲ್ಲ. ಇದು ದೇವಿಯ ಪವಾಡವೆಂದು ನಂಬಿರುವ ಭಕ್ತರು, ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುತ್ತಾರೆ.

ಏಕದಿನ ಪವಾಡ
ಜಾತ್ರೆಯ ವಿಶೇಷತೆ ಎಂದರೆ ಈ ದಿನವೇ ಮಾತ್ರ ಚೇಳುಗಳು ಧುಮುಕುತ್ತವೆ. ನಾಳೆ ಬಂದರೆ ಒಂದು ಚೇಳು ಸಹ ಸಿಗುವುದಿಲ್ಲ ಎನ್ನುವುದು ಸ್ಥಳೀಯರ ನಂಬಿಕೆ. ಈ ಪವಾಡದ ಹಿಂದೆ ಒಂದು ಕಥೆಯೂ ಇದೆ –
ದಶಕಗಳ ಹಿಂದೆ ಈ ಬೆಟ್ಟಕ್ಕೆ ಬಂದ ಅರಣ್ಯಾಧಿಕಾರಿಯೊಬ್ಬರು ಮರದ ಕೆಳಗೆ ಕುಳಿತ ಕೆಲವೇ ನಿಮಿಷಗಳಲ್ಲಿ ದೃಷ್ಟಿ ಕಳೆದುಕೊಂಡಿದ್ರಂತೆ. ಬಳಿಕ ಸ್ಥಳೀಯರ ಸಲಹೆಯಂತೆ ಸಣ್ಣ ಮೂರ್ತಿಗೆ ಕ್ಷಮೆ ಯಾಚಿಸಿದ ಅವರ ದೃಷ್ಟಿ ಮರುಕಳಿತವಾಗಿದೆಯಂತೆ. ಈ ಘಟನೆಯ ನಂತರ ಅರಣ್ಯಾಧಿಕಾರಿ ದೇವಿಯ ಗಂಭೀರತೆಯನ್ನು ಅರಿತು ದೇವಾಲಯ ನಿರ್ಮಾಣ ಮಾಡಿಸಿ ಹೋಗಿದ್ರಂತೆ.

ಭಕ್ತರ ನಂಬಿಕೆ, ಪವಾಡದ ಅನುಭವ
ಕೊಂಡಮ್ಮ ದೇವಿಯ ಜಾತ್ರೆಯಲ್ಲಿ ಸ್ತ್ರೀ–ಪುರುಷ, ಯೌವನ–ಮೃತ್ಯುಭಯ ಎಲ್ಲವನ್ನೂ ಮರೆತಂತಹ ದೃಶ್ಯಗಳೆಲ್ಲ ಹರಿದುಹೋಗುತ್ತವೆ. ಚೇಳುಗಳ ಜೊತೆ ಆಟವಾಡುವ ಭಕ್ತರನ್ನು ನೋಡಿದರೆ, “ಈದು ಪವಾಡವಲ್ಲದೇ ಬೇರೆ ಏನು?” ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಒಟ್ಟಾರೆ, ಭಯ ಮತ್ತು ಭಕ್ತಿಯ ನಡುವಿನ ಈ ಚಿಲುಮೆಯಾದ ಕಂದಕೂರ ಜಾತ್ರೆ, ಕೇವಲ ಧಾರ್ಮಿಕ ಆಚರಣೆಯಲ್ಲ – ಇದು ನಂಬಿಕೆಯ ಪವಾಡದ ಜೀವಂತ ಸಾಕ್ಷ್ಯ.

Related Post

Leave a Reply

Your email address will not be published. Required fields are marked *

error: Content is protected !!