ಯಾದಗಿರಿ : “ಸ್ವಚ್ಚ ಯಾದಗಿರಿ” ನವೆ ಬಾಗಿಲು ತೆರೆದ ನಂತರ ರಸ್ತೆ ಮೇಲೆ ಕಸ ಹಾಕಿದ ಪಿಡಬ್ಲುಡಿ ಇಲಾಖೆಯ ಮೇಲೆ ನೇರವಾಗಿ ಕಣ್ಣಿಟ್ಟವರು ನಗರಸಭೆ ಅಧ್ಯಕ್ಷೆ ಕು. ಲಲಿತಾ ಮೌಲಾಲಿ. ಸ್ವತಃ ಅಧ್ಯಕ್ಷೆ ತಾವೇ ಕಾರಿನಿಂದ ಕೆಳಗಿಳಿದು, ಸ್ಥಳೀಯ ಅಧಿಕಾರಿ ಮೇಲೆ ದಂಡ ಹಾಕಿಸಿ, ಮುಂದಿನ ಸಲ ತಪ್ಪು ಮರುಕಳಿಸದಂತೆ ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆಯ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಸುಭಾಷಚಂದ್ರ ಬೋಸ್ ವೃತ್ತದ ಬಳಿ ಇರುವ ಪಿಡಬ್ಲುಡಿ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಕಸದ ಗುಡ್ಡೆ ಬಿದ್ದಿರುವುದು ಗಮನಿಸಿದ ಅಧ್ಯಕ್ಷೆ, ತಕ್ಷಣವೇ ಕಚೇರಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ಹಿಂದಿರುಗಿದಾಗಲೂ ಕಸದ ಸ್ಥಿತಿ ಯಥಾವತ್ತಾಗಿ ಕಂಡು ಬಂತು.
ಅದರಿಂದ ತಕ್ಷಣವೇ ನಗರಸಭೆ ಸಿಬ್ಬಂದಿಗೆ ಕರೆ ನೀಡಿ, ಪಿಡಬ್ಲುಡಿ ಅಧಿಕಾರಿಗೆ 200 ರೂಪಾಯಿ ದಂಡ ವಿಧಿಸಿ, ಇನ್ನು ಮುಂದೆ ರಸ್ತೆ ಮೇಲೆ ಕಸ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸ್ಥಳದಲ್ಲಿಯೇ ದಂಡ ಪಾವತಿಸಿದ ಅಧಿಕಾರಿ ಅಧ್ಯಕ್ಷೆಯ ಬಳಿ ಕ್ಷಮೆ ಕೇಳಿ, ಇನ್ನು ಮುಂದೆ ಈ ರೀತಿಯ ತಪ್ಪು ಮರುಕಳಿಸದಿರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಸಲಹೆಗಾರ ಶರಣಗೌಡ ಬಲಕಲ್, ಅಧಿಕಾರಿಗಳಾದ ಶಿವಪುತ್ರ ಹಾಗೂ ನಗರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
“ಪೋಟೋ ಕಳಿಸಿ, ಕಸ ವಿಲೇವಾರಿ” ಅಭಿಯಾನ
ನಗರಸಭೆ ಅಧ್ಯಕ್ಷೆ ಲಲಿತಾ ಮಾವಲಾಲಿ ಮಾತನಾಡುತ್ತಾ, “ನಾವು ಸ್ವಚ್ಚ ಯಾದಗಿರಿ ನಗರಕ್ಕಾಗಿ ಪಣ ತೊಟ್ಟಿದ್ದೇವೆ. ಯಾರೇ ಆಗಲಿ, ಸಾರ್ವಜನಿಕ ಜವಾಬ್ದಾರಿ ಮರೆತು ರಸ್ತೆಯಲ್ಲಿ ಕಸ ಹಾಕಿದರೆ ದಂಡ ಗ್ಯಾರಂಟಿ. ಯಾವುದೇ ಇಲಾಖೆ ಅಥವಾ ಸಂಸ್ಥೆ ಈ ನಿಯಮವನ್ನು ಮೀರುತ್ತದಾದರೆ, ಶಿಸ್ತು ಕ್ರಮಕ್ಕಾಗಿ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆದೇ ತೀರುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
ಸ್ವಚ್ಚತೆಗೆ ಶ್ರದ್ಧೆಯಾದರೆ, ಕಸಕ್ಕೂ ಜವಾಬ್ದಾರಿ ಬೇಕು!

