ಬೆಂಗಳೂರು ಮಾ ೦೨:- ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ನಾಳೆ (ಸೋಮವಾರ) ಪ್ರಾರಂಭವಾಗಲಿದ್ದು, ಮಾರ್ಚ್ 21ರ ತನಕ ಮುಂದುವರಿಯಲಿದೆ. ಅಧಿವೇಶನದ ಮೊದಲ ದಿನ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು. ಶನಿವಾರ ಮತ್ತು ಭಾನುವಾರವನ್ನು ಹೊರತುಪಡಿಸಿ ಒಟ್ಟು 14 ದಿನಗಳ ಕಾಲ ಕಲಾಪಗಳು ನಡೆಯಲಿವೆ.
ಮಾರ್ಚ್ 4ರಿಂದ 6ರವರೆಗೆ ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆಯಲಿದ್ದು, ನಂತರದ ದಿನಗಳಲ್ಲಿ ಮುಕ್ತ ಚರ್ಚೆಗಳು ಮತ್ತು ಬಜೆಟ್ ಪ್ರಕ್ರಿಯೆಗಳು ನಡೆಯಲಿವೆ. ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ಬಜೆಟ್ ಮಂಡನೆಯಾಗಲಿದ್ದು, ಈ ಕುರಿತು ಹೆಚ್ಚಿನ ಕುತೂಹಲ ಮೂಡಿದೆ.
ಬೆಂಗಳೂರು ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನಕ್ಕೆ ಮನವಿ
ಇತ್ತೀಚೆಗೆ ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಸಂಸದರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿತು. ಬೆಂಗಳೂರಿನಿಂದ ರಾಜ್ಯದ ಒಟ್ಟಾರೆ ಆದಾಯದ ಪ್ರಮುಖ ಭಾಗ ಬರುತ್ತಿರುವ ಕಾರಣ, ನಗರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಮುಖ್ಯವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಮೊತ್ತವನ್ನು ಮೀಸಲಿಡುವಂತೆ ಆಗ್ರಹಿಸಲಾಗಿದೆ.
ಸಿಎಂ ಸಿದ್ದರಾಮಯ್ಯನವರಿಗೆ ವಿಧಾನಸೌಧದಲ್ಲಿ ವಿಶೇಷ ರ್ಯಾಂಪ್ ವ್ಯವಸ್ಥೆ
ಬಜೆಟ್ ಅಧಿವೇಶನದ ಪ್ರಸ್ತುತ ಸಂದರ್ಭದಲ್ಲೇ, ಮಂಡಿ ಚಿಪ್ಪು ನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ವಿಧಾನಸೌಧದಲ್ಲಿ ವಿಶೇಷ ರ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವೈದ್ಯರ ಸಲಹೆಯಂತೆ ಅವರಿಗೆ ಆರು ವಾರಗಳ ವಿಶ್ರಾಂತಿ ಅಗತ್ಯವಿರುವುದರಿಂದ, ಸಿಎಂ ನಡೆದಾಡಲು ಅನುವು ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯನವರು ಕುಳಿತುಕೊಂಡೇ ಬಜೆಟ್ ಓದುವ ಸಾಧ್ಯತೆ ಇದ್ದು, ಈ ಕುರಿತು ಸಿದ್ಧತೆಗಳು ನಡೆಯುತ್ತಿವೆ.
ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ಮಹತ್ವದ ಘೋಷಣೆಗಳಿಗೆ ವೇದಿಕೆಯಾಗಲಿದ್ದು, ಪ್ರಜೆಗಳು ಹಾಗೂ ಪ್ರತಿಪಕ್ಷಗಳ ನಿರೀಕ್ಷೆಗೂಡೆಗೆಂಡಿದೆ.

